ಸುಳ್ಳೆ ಮರುಗುವ ಬದಲು

ಸುತ್ತಿ ಬರಬೇಕು 
ಬುಗುರಿಯಂತಲ್ಲ ಉಯ್ಯಾಲೆಯ ಹಾಗಲ್ಲ
ಇಲ್ಲೇ ಇರದೆ ಆಚೆ ಊರಾಚೆ
ಕೋಲಾಹಲದ ನಡುವೆ ಒಳಗಣ್ಣ ತೆರೆದು
ಎಲ್ಲರೊಳ ಮನಸನರಿಯಬೇಕು,

ಇಲ್ಲಿಹುದು ಎಳೆಚೂರು ಎಲ್ಲಿದೆ ಬಹುಪಾಲು…!
ತಿರುವು ಮುರುವುಗಳ ಪಥಗಳ ನಡುವೆ
 ನೆಗೆದು ಸರಿಯುವ ಗಾಲಿ
ಹಗಲಿರುಳ ತೂಗಿನಲಿ ಮುಗುಳುನಗುತ ಸರಿಯುವ ಕಾಲ
ಕಾಣಬೇಕು ಮನಗಾಣಬೇಕು ವಿಶಾಲವಾಗಬೇಕು
ಸರಿತೂಗಿಸೆಂದು ಹೇಳಿ ಬರಬೇಕು

ಬೆಳೆ ಕಳೆದ ಬೋಳು ಹೊಲ ಅದ್ಯಾವ ನೆಲ…?
ಹಸಿರನೊಣಗಿಸಿ ನಿಂತ ನೀಳ ಮರ ಎಲೆ ಕಳಚಿ
ಉಸಿರ ಲಯ ಕಂಪಿಸುತ
ಬಿಸಿಲ ಬಿರುಸನು ಹಳಿದಂತೆ…!
ಜಲದ ಇನಿದನಿಗೆ ನೆಲದ ಹಾಡಿನ ಸೊಲ್ಲು
ಪದದಾಳದ ಮೊರೆತವನಾಲಿಸಿ ಬರಬೇಕು 

ಮಿಕ್ಕಿದವುಗಳ ನೀಡುವ ಮನಸ್ಸುಗಳಿಲ್ಲದೆ
ಮೃಷ್ಟಾನ್ನ ಚಿತ್ರಾನ್ನ ಹಾದಿ ಬೀದಿಯಲಿ ಕಾಲಡಿಯಲಿ
ಕಸದ ತೊಟ್ಟಿಯ ಸುತ್ತ ಸಣಕಲು ಅಂಗೈಯಲುಗು
ಸರಿತೂಗಿಸಲಾಗದೇ…?
 ಉಳ್ಳವರು ಇಲ್ಲದವರ ನಡುವೆ…!
ಸಮನಿಸಿರೆಂದು ಹೇಳಿ ಬರಬೇಕು

ಹೆಣ್ಣು ಹೊನ್ನು ಮಣ್ಣಿಗೆ ಜಗಳ ಜಗದಗಲ
ಒಬ್ಬರಿಗೊಬ್ಬರಾಗದಂತೆ ಮೋಡ ಮಿಂಚೆಸೆದಂತೆ
ಅಜ್ಞಾನದ ಕತ್ತಲೆಯಲಿ ಕಾಣೆಯಾಗುತಿವೆ 
ಹರೆಯಗಳ ಸರಮಾಲೆ
ಅದೇ ನೀತಿ ಅದೇ ರೀತಿಯನುಳಿದು
ಹೊಸತೊಂದು ಬರಬಹುದೇ ತೆರೆಯ ಮರೆಯಿಂದ…!
ಸುಳ್ಳೆ ಮರುಗುವ ಬದಲು
ಸುತ್ತಿ ಬರಬೇಕು ಜಗದಗಲದ ಊರುಕೇರಿಯಲಿ

  • ಅನಿತಾ ಪಿ. ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಸುಳ್ಳೆ ಮರುಗುವ ಬದಲು”

  1. Adv R.M. Bhandari Mumbai

    ತುಂಬಾ ಉತ್ತಮವಾಗಿ ಮೂಡಿಬಂದಿದೆ. ಅಭಿನಂದನೆಗಳು ಅನಿತರವರೆ 🥰

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai