ಬೇಕಿತ್ತು ಕೋಪ ಗೃಹ

ಚಿತ್ರ: ಮಂಗಳಾ ಶೆಟ್ಟಿ

ಮೊನ್ನೆ ಮೊನ್ನೆಯಷ್ಟೇ ನಡೆದ
ದಶರಥನ ನಾಟಕ
ನೋಡಿ  ಹೀಗನಿಸಿದ್ದು ಹೌದು
ಕ್ರೋಧದ ತಾತ್ಕಾಲಿಕ ಉಪಶಮನಕ್ಕಾದರೂ
ಕೋಪದಿಂದ ಕೋರ್ಟ್ ವರೆಗೆ ಹೋಗುವ
ಸಂದರ್ಭಗಳ ತಡೆ ಹಿಡಿಯಲಿಕ್ಕಾದರೂ
ಬೇಕಿತ್ತು ಮನೆ ಮನೆಗೊಂದು ಕೋಪ ಗೃಹ
ಬಹಳ ಸಮಯದಿಂದ, ಸಂಯಮದಿಂದ
ಪತಿಯ ನಿರ್ಲಕ್ಷ್ಯದ ನೋವ
ಅನುಭವಿಸುವ ಹೆಣ್ಣಿಗೆ
ಸದ್ದಿಲ್ಲದೆ ಅಳಲು ಸಮಯವಿಲ್ಲದ ಕಣ್ಣಿಗೆ
ಮನೆ ಮಂದಿಯ ದೌರ್ಜನ್ಯದಿಂದ
ನೊಂದಕೊಂಡ ಮನಸ್ಸಿಗೆ
ಎಲ್ಲರೆದುರು ಸಮಸ್ಯೆಗಳ
ಹೇಳಿಕೊಳ್ಳಲಾಗದ ಸ್ಥಿತಿಗೆ
ದಿನಾ ಅದೇ ಗೋಳಿನಲಿ,
ಬದಲಾವಣೆ ಇಲ್ಲದೆ, ಬೇಸತ್ತು ಹುಚ್ಚಿಯಂತಾಗುವವರಿಗಾಗಿ
ಇರಬೇಕೆನಿಸುತ್ತದೆ ಗೃಹಕ್ಕೊಂದು ಕೋಪಗೃಹ
ಶೋಷಣೆಗೆ ಹಳಿದು, ಶ್ರದ್ಧೆಯಿಲ್ಲದ ಮನದಿ
ಸಪ್ಪೆ ಅಡುಗೆಯ ಮಾಡಿ
ಅಸಮಾಧಾನವ ಬಡಿಸುವ ಮೊದಲು
ಪುಕ್ಕಟೆಯಾಗಿ ಪೆಟ್ಟು,
ಪುಟ್ಟ ಕಂದಮ್ಮಗಳಿಗೆ ಉಣಿಸುವ ಬದಲು
ಪ್ರವೇಶಿಸಿಯೇ ಬಿಡಬೇಕು ಕೋಪಗೃಹ
ಅಲ್ಲಿ ಕೋಪಗೃಹದಲ್ಲಿ  ಚೆಲ್ಲಾಪಿಲ್ಲಿಯಾಗಿ
ಕೆದರ ಬೇಕು ಕೇಶಗಳ
ಬೆನ್ನ ಮೇಲೆ, ಹೆಗಲ ಮೇಲೆ,ಮೊಗದ ಮೇಲೆ 
ಅತ್ತು ಅತ್ತು ಕಣ್ಣುಗಳ ಕಾಡಿಗೆ
ಹರಡಿ ಹೋಗಬೇಕು ಸುತ್ತ ಗುರುತೇ ಸಿಗದ ಹಾಗೆ
ಅಡುಗೆ ಮನೆಯಿಂದ ಅಡಿಗಡಿಗೆ ಬರುತ್ತಿದ್ದ
ಸುವಾಸನೆ ಸ್ಥಬ್ದವಾಗಿ
ಒಲೆಯಲ್ಲಿ ಏನೂ ನಡೆಯದಂತೆ
ಎಲ್ಲ ಪರಿಕರಗಳೂ  ಹೂಡಬೇಕು ಮುಷ್ಕರ
ಸೂಚನೆ ಉಪವಾಸವೇ ಗತಿ
"ಓಹೋ ಸೇರಿದಳೇ ಕೋಪಗೃಹ "
ಎಂದು ಕಸಿವಿಸಿಗೊಂಡು
ಬಂದರೆಷ್ಟು ಚೆನ್ನ ಪತಿ ಪರಮೇಶ್ವರ
ಸಂತೈಸಿ, ರಮಿಸಿ ಕರೆದೊಯ್ಯಲು ಬಂದಾಗ
ತಕ್ಷಣವೇ ಸೋಲ ಬಾರದು ಸಲ್ಲಿಸದೆ ಬೇಡಿಕೆ
ಕೈಕೆಯಂತೆ ಮನೆಹಾಳು ಆಸೆಗಳ ತೋರದೆ
ಪತಿಗೆ ಸಂದಿಗ್ಧ ತರುವ ಮಾತುಗಳ ಆಡದೆ
ಮಂಥರೆಯಂತವರ ಪ್ರಭಾವದಲಿ
ಮನಃಶಾಂತಿಯ ಕದಡದೆ
ಏನಾಗಬೇಕು ಎಂದಾಗ,
ಹೇಳಿಕೊಳ್ಳಬೇಕು  ಅಳುತ್ತಲೇ ಅಳುಕದೆ
"ತುಸು ಬತ್ತಿದಂತನಿಸಿದೆ ನಿಮ್ಮ
ಪ್ರೀತಿ, ಕಾಳಜಿಯ ಒರತೆ"
ಹೇಳಿ ಬಿಡಬೇಕು ಸಮಾಧಾನದಲಿ
ಎಲ್ಲೆಲ್ಲಿ ಕುಂದು ಕೊರತೆ ಯಾವಾಗ ಯಾರಿಂದ
ಸತಿಯ ಮನದಾಳದಿಂಗಿತವ ಪತಿ ತಿಳಿಯಬೇಕು
ಅವಳ ನರಳಿಕೆಯನಳಿಸಿ  ನಗೆಯನರಳಿಸಬೇಕು
ಅರಿಯಬೇಕು  ಆತ ಕಟ್ಟಿದ ಕೂಪದೊಡತಿ ಮಾತ್ರವಲ್ಲ
ಕೋಪಗೃಹದೊಡತಿಯೂ ಇವಳೆಂದು
ಮೃದು ಮಾತಿನ ಹಿತ ನೋಟದಿ
ಹೊತ್ತಿದ ಕ್ರೋಧಾಗ್ನಿಯ ನಂದಿಸಲಿ
ಹೀಗಾಗದು ಇನ್ನೆಂದಿಗೂ ಎಂದು
ಭರವಸೆಯ ಕೊಡಲಿ
ನಂಬಿಕೆಯ ದೀಪವೊಂದು ಕಣ್ಣಲ್ಲೇ ಮಿನುಗಿದಾಗ
ಚದುರಿದ್ದ ಕೂದಲ ಬಾಚಿ ಕಣ್ಣೊರೆಸಬೇಕು ಆಕೆ
ಕಾಲಿಡಬೇಕು ಮನೆಯೊಳಗೆ
ಹೊಸ ಕನಸ ಹೆಣೆದು ಮುಗುದೆ
ಪತಿಯ ಸಮಾಧಾನದಲಿ
ಸಾವರಿಸಿಕೊಳ್ಳಬೇಕು ಆಕೆ ತನ್ನೆದೆಯ ಬಡಿತ
ಮತ್ತೆ ಕೇಳಿಸಬೇಕು ಅಡುಗೆ ಮನೆಯಲ್ಲಿ
ಸಾಸಿವೆಯ ಸಿಡಿತ
                                  ಸೌಮ್ಯ ಪ್ರವೀಣ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ಬೇಕಿತ್ತು ಕೋಪ ಗೃಹ”

  1. ಶೇಖರಗೌಡ ವೀ ಸರನಾಡಗೌಡರ್

    ಅರ್ಥಪೂರ್ಣ. ಚೆನ್ನಾಗಿದೆ. ಅಭಿನಂದನೆಗಳು.

  2. ಧರ್ಮಾನಂದ ಶಿರ್ವ

    ತುಂಬ ಸೊಗಸಾದ ಕವನ.
    ಹೆಣ್ಣು ಸಾಮಾನ್ಯವಾಗಿ ಬಯಸುವ ಗಂಡನ ಪ್ರೀತಿ, ಕಾಳಜಿಯಲ್ಲಿ ಲೋಪ ಕಂಡಾಗ ಕೋಪಗೃಹವೊಂದು ಬೇಕೆಂದೆನಿಸುವ ಭಾವ ಅವಳ ಅಂತರಂಗದ ಪ್ರತೀಕವಾಗಿ ತೋರುತ್ತದೆ.
    ಇದನ್ನು ಓದಿದಾಗ ನನಗೆ ಕೃಷ್ಣ ಸತ್ಯಭಾಮೆಯರ ಪಾರಿಜಾತ ಪ್ರಸಂಗ ನೆನಪಾಯಿತು.
    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai